Monday, March 8, 2010

ಬದುಕಿದ್ದೇನೆ ಬುದ್ಧಿ ಜೀವಿಯಾಗಿ

ಮನೆಯ ಸುತ್ತಲೂ ಬೇಲಿಹಾಕಿದ್ದೇನೆ
ಕಿಟಕಿಗಳಿಗೆ ಜಾಲರಿ ಬಡಿಸಿದ್ದೇನೆ
ನೆರಳಿಗೆಂದು  ಒಂದು, ಚಂದಕ್ಕೆರಡು 
ತೆಂಗಿನ ಗಿಡ ನೆಟ್ಟಿದ್ದೇನೆ 
ಆದರೆ ಯಾರಿಗೂ ಒಂದು ಕಾಯಿ ಕೊಟ್ಟಿಲ್ಲ 

ಜಿರಳೆ, ಹುಳ ಸೊಳ್ಳೆ ಸಾಯಿಸಲು ಔಷಧಿಯನ್ನಿಟ್ಟಿದ್ದೇನೆ,
ಬೇಕಾದಾಗ ಮಳೆ ತರಿಸಿದ್ದೇನೆ
ಆಟಗಳು ರದ್ದಾಗದಂತೆ ಮಳೆ ತಡೆದಿದ್ದೇನೆ
ಹರಿಯುವ ನೀರನ್ನು ಕಟ್ಟಿ ನಿಲ್ಲಿಸಿದ್ದೇನೆ
ಆದರೆ ಬಾಯಾರಿದವರಿಗೆ ಒಂದು ಲೋಟ ನೀರು ಕೊಟ್ಟಿಲ್ಲ 

ಪದವಿ ಮೇಲೆ ಪದವಿ ಪಡೆದಿದ್ದೇನೆ 
ಸರ್ವಜ್ಯ್ನನಿಂದ ಹಿಡಿದು ಮೂರ್ತಿಯವರೆಗೂ ಓದಿದ್ದೇನೆ 
ಆದರೆ ಮಾತಿಗೆ ಮಾತು ಬೆಳೆಸಿ
ಜಗಲಕ್ಕೆ ನಿಂತುಬಿಡುತ್ತೇನೆ

ಧ್ಯಾನ ಮಾಡುತ್ತೇನೆ ಪೂಜೆ ಮಾಡುತ್ತೇನೆ 
ತುಪ್ಪದ ದೀಪ ಹಚ್ಚುತ್ತೇನೆ, ಕಕ್ಕುಲಾತಿಯ ಮಾತನಾಡಿ 
ಒಳ್ಳೆಯವನೆಂದೆನಿಸಿಕೊಳ್ಳುತ್ತೇನೆ. ಆದರೆ 
ಪರರ  ಏಲ್ಗೆ  ಕಂಡು ಒಳಗೊಳಗೇ  ಹಲ್ಲುಮಸೆಯುತ್ತೇನೆ.

ಬದುಕಿದ್ದೇನೆ ಬುದ್ಧಿ ಜೀವಿಯಾಗಿ

ಹದ್ದು ಬಡಿಯುತ್ತೇನೆ, ಹಾವು ಬಡಿಯುತ್ತೇನೆ 
ಕದ್ದು ಮುಚ್ಚಿ ಹೆಂಗಸರ ಎದೆಯ ನೋಡುತ್ತೇನೆ 
ಮತ್ತೆ ರಾಮ ಬುದ್ಧ, ಹನುಮನಂತೆ ಪೋಸು ಕೊಡುತ್ತೇನೆ 

ಆತ್ಮಸಾಕ್ಷಿಯ ನ್ಯಾಯಾಲಯಕ್ಕಂಜಿ 
ಎಲ್ಲವನು ಬಿಟ್ಟು ಬದಲಾಗುವ ಇಚ್ಛೆ ತೊಟ್ಟು
ಮೌನಿಯಾಗುತ್ತೇನೆ.
ಜಗತ್ತು ಒಂದೇ ಸಮನೆ ಕೇಳತೊಡಗುತ್ತದೆ
Anything wrong with you theese days ?

ಮತ್ತೆ ಬದುಕುತ್ತೇನೆ ಬುದ್ಧಿ ಜೀವಿಯಾಗಿ.

       
ಚಂದ ಮಾಮ ಬರನು ಅದು ತಾಯಿಗೆ ಗೊತ್ತು
ಕರೆದೂ ಕರೆದು ಮಗುವಾಯಿತ್ತು ಸುಸ್ತು
ಮಗುವಾಗಿದ್ದಾಗ ಮಾವನಾಗಿದ್ದ ಚಂದ್ರ 
ಈಗ ತಾಯಿಗೆ ಅಣ್ಣ, ತನ್ನ ಮಗುವಿಗೆ ಮಾವ

ಅವಳಿಗೂ ಗೊತ್ತು ತಾನು ಸುಳ್ಳಿ ಎಂದು
ಚಂದ್ರನ ತೋರಿಸಿಯೇ ತರಿಸಿದೆನೆಂದು
ನಂಬಿಸುವಳು ಮಗುವ. ತಂದೆ ನಗುವ.
ಅವನು ಅಷ್ಟೇ, ಒಂದೇ ಒಂದು ದಿನ ಹಾಗೆ...
ಅಮ್ಮನ ಹಾಗೆ ತಟ್ಟೆಯಲಿ ನೀರ್ಹಾಕಿ
ಚಂದ್ರನ ತರೆಸಿಲ್ಲ ಅವ- ಮಹಾ ಸೋಂಬೇರಿ

ಕೃಷ್ಣನಿಗೆ ಯಶೋಧೆ ಗುಮ್ಮನ ತೋರಿಸಿದಳೆಂದು
ಆ ಯಶೋಧೆಯಾನೆ ಬಯ್ಯುವಳು ಇವಳು
'ಛೆ! ತನ್ನ ಕಂದಮ್ಮನಿಗೇ ಗುಮ್ಮನ ತೋರಿಸುವುದೇ?
ಎಂಥ ತಾಯಿ?'

ಮಗು ಅಮ್ಮ ಅಮ್ಮ ಎಂದು ಬಾಯಿ ನೊಂದು ಮಲಗಿದಾಗ
ತಾಯ ಕಣ್ಣು ನೊಂದು, ನೀರು ಬತ್ತಿ
ಬಿಕ್ಕಳಿಸಿರಲಿಕ್ಕೂ  ಸಾಕು.
ಪ್ರೀತಿಯೋ, ವಾತ್ಸಲ್ಲವೋ,ಮಾಯೆಯೋ
ಅಂದ ದಲ್ಲ್ಲಾ ತಪ್ಪು, ಕರೆದದ್ದೆಲ್ಲ ಸರಿ

ಕಪ್ಪೋ ಬಿಳುಪೋ
ಶಾಂತಸಾಗರದ ನೀಲಿಯೋ ಬಣ್ಣ?
ಬರೀ ಕಣ್ಣ ಬೆರಗಿಗೆ ಹಿಗ್ಗಿ  ಸೋತವಳಿಗೆ
ಯಾವುದಾದರೇನು ಬಣ್ಣ.
ಕಾಲನೋದ್ದು ಹಾಲು ಕುಡಿವಾಗ ಆದ ಆನಂದ
ದೈವ ಲೀಲೆ!

ಕುಂಡೆಯೂರಿ  ಕೂತು, ಮೊಂಡೆಯೂರಿ ನಡೆದು
ಒಂದೊಂದೇ ಹೆಜ್ಜೆ ಇಟ್ಟು, ಎರಡಕ್ಷರದ ಮಾತಾಡಿ 
ತನ್ನ ಬಾಲಲೇಲೆಗಳನಾಡಿ, ನಾಲ್ಕಕ್ಷರದ ಮಾತು
ಕಲಿಯುವದರಲೇ ತಾಯ ಋಣ ತೀರಿಸಿತು ಮಗು
ಮಹಾದಾನಂದ ಸಾಗರವನೇ ಕುಡಿಸಿ
ತಾಯಿಗೆ ಹೆರಿಗೆ ನೋವ ಮರೆಸಿ







  

Om Beach

ನಾನು ಎನ್ನುವರೆಲ್ಲ ನಿನ್ನ ಮುಂದೊಮ್ಮೆ ಬರಲಿ
ಆ ಅರ್ಭಟ ರಭಸ ಭೋರ್ಗರೆತಗಳು
ಎಂಥವನ ಎದೆಯನ್ನೂ ನಡುಗಿಸಲೇ ಬೇಕು
ಅಷ್ಟಲ್ಲದೇ ನೀ ಜಗತ್ ಸೃಷ್ಟಿಕರ್ತಳೇ ಹೇಳು?

ನಿನ್ನ ಆಳ ಅಗಲ ಶಕ್ತಿ ಸಾಮರ್ಥ್ಯ
ಆಕಾಶ ಭೂಮಿ ಒಂದು ಮಾಡಿ ನಿಂತ ಪರಿ
ನಿನ್ನ ಅಧ್ಬುತ, ರೌದ್ರ ಮತ್ತೆ ಪ್ರಶಾಂತ ಮೌನ 
ನನ್ನ ಅಣೆ ಗಾತ್ರದ ಕಣ್ಣುಗಳಲಿ  ತುಂಬಿಕೊಳಲು 
ಹೇಗೆ ಸಾಧ್ಯ.
ಹಳೆಯ ತಾಮ್ರಕೆ ಹೊಸ ಲೇಪ ಹಚ್ಚಿ
ತೊಳೆದು ತಿಕ್ಕಿ ಒರೆಸಿ
ಥಳ ಥಳ ಹೊಳೆವಂತೆ ಮಾಡಿ
ಹಿಗ್ಗುವುದು ನಮ್ಮ ರೀತಿ

ತೊಳೆದಾಗಲೆಲ್ಲ ಹೊಳೆದು ಹೊಳೆದು
ಥಳಥಳಿಸಿ, ಗೊತ್ತೇ ಆಗದಂತೆ 
ಸವೆ ಸವೆದು ಕರಗುವುದು 
ಅದರ ನೀತಿ  

Lullaby

ಮಲಗು ಮುದ್ದಿನ ಕಂದ
ಮಲಗು ಶ್ರೀ ಗಿರಿಯ ಗೋವಿಂದ
ಮಲಗು ನನ್ನ ಇಂದ್ರ ಚಂದ್ರ- ಜೋ ಜೋ

ಬಗೆ ಬಗೆಯ ಆಟಗಳ ಆಡಿ ಆಡಿಸಿದ್ದು ಸಾಕು
ನನ್ನ ಸೋಲಿಸಿ ಅಳಿಸಿ ನಗಿಸಿದ್ದು ಸಾಕು
ಆಡಿ ಆಡಿ ಸೋತ ಕಾಲನೋತ್ತುವೆ ಮಲಗು-ಜೋ ಜೋ

ಊರ ಚೆಲುವಿಯರೆಲ್ಲ ನಿನ್ನ ನೋಡಲು ಬಂದು
ದ್ರಿಷ್ಟಿ ತಾಗಿತು ಎಂದು
ದ್ರಿಷ್ಟಿತೆಗೆಯುವೆನು ಕಂದ ಮಲಗು- ಜೋ ಜೋ

ಮನೆಯ ಕೆಲಸವ ನಿನ್ನ ಅಪ್ಪ ಮಾಡುವನೇನೋ
ಮುಪ್ಪು ಬಂದಿರೋ ಮುದುಕಿ 
ಎಷ್ಟು ಹಿಡಿವಳೋ  ನಿನ್ನ ಮಲಗು-ಜೋ ಜೋ

ಚೆಲುವು ಅಂದರೆ ನಿಂದೆ 
ಒಲವು ಅಂದರೆ ನಿಂದೆ, ಮಗನೆ
ಹಲವು ಬಗೆಯಲಿ ಹಾಡ್ವೆ ಮಲಗು-ಜೋ ಜೋ  
ಹರನ ನಂಬುವರು ಹರಿಯ ನಂಬರು
ಹರಿಯ ನಂಬುವರು ಹರನ ನಂಬರು
ಅಲ್ಲಹ ಕ್ರಿಸ್ತನ ಭಕ್ತರೇನು ಇದಕೆ ಹೊರತಲ್ಲ.
ಹರನ ನಂಬಲಿ ಬಿಡಲಿ
ಹರಿಯ ನಂಬಲಿ  ಬಿಡಲಿ- ತಾಯೆ
ನರರು ನರರ ನಂಬಲಿ

14th Feb

ಎಷ್ಟು ಸೊರಗಿರುವೆ ಗೆಳತಿ
ಗೆಳೆಯನ ಚಿಂತೆಯಲಿ
ನವ ವಸಂತಕೆ ಕೋಗಿಲೆ
ಬಂದಂತೆ ಬರುವನೆಂದು ಕಾದು?

ಹಾಡು ಕಟ್ಟಿದ್ದೇನು?  ಹಾಡಿ ಕರೆದದ್ದೇನು?
ಏನು ನಿನ್ನ ಪಾಡೇನು ಗೆಳತಿ?
ಬೀಡು ಬಿಟ್ಟದ್ದಾದರೆ ನಿನ್ನ ಪ್ರೀತಿ ಅವನಲಿ, ಅವನದು ನಿನ್ನಲಿ
ಬಂದೇ ಬರುವನು ಇನಿಯ.
ಹೂವು ಅರಳುವುದನು ಕಾಯುತ ಕುಳಿತೆ
ಹೂವಿಗೆ ಮಕರಂದ ಸೇರುವುದ ಕಾಯುತ ಕುಳಿತೆ
ಅಷ್ಟರಲೇ ಒಂದು ದುಂಬಿ ಬಂದು ಹೋಯಿತು ಕಣ್ಣ ಮುಂದೆ
ನಗನಿಸಿತು ಆಗ- ನಾನು ದುಂಬಿಗಿಂತಲೂ ಮೂರ್ಖ
ರದ್ದಾಗಿದೆ ತಿದ್ದುಪಡೆ ಆಗುವವರೆಗೆ 
ಬಿ ಟಿ ಬದನೆ
ಕದ್ದು  ತಿಂದದ್ದಾದರೆ ರಾಜಕಾರಣಿ ಹಳೊಂದಿಷ್ಟು
ಆಚಾರ ಹೇಳುವದಕೆ ತಿನ್ನುವುದಕೆ 
ಬಿ ಟಿ  ಬದನೆ  
ಕಣ್ಣು ನೋಡುವದನೆಲ್ಲವಾದರೂ
ಕಣ್ಣು ಕಣ್ಣ ನೋಡಲು ಕನ್ನಡಿಯೇ ಬೇಕು
ಕಣ್ಣಿಗೊಂದು ಒಳಗಣ್ಣಿದ್ದವ
ಕುರುಡನಾಗಿಯೂ  ಕಾಂಬ ತನ್ನ ಕಣ್ಣ 
ನನ್ನ ತಾಳ್ಮೆಯ ಪರೀಕ್ಷಿಸುವ
ಪುರುಷನೇ   ಕೇಳು
ಸೀತೆ, ದ್ರೌಪದಿಯರ ಕಾಲವಲ್ಲ ಇದು
ಇನ್ನು ನಾ ಅಡಿಗೆ ಮನೆಯ ಸೊತ್ತಲ್ಲ
ಮಂಜೂರಾಗಿದೆ  ಮೀಸಲಾತಿ- ಇನ್ನು
ನಿನಗೆ ಫಾಸ್ಟ್ ಫೂಡೆ  ಗತಿ

Friday, February 26, 2010

Saturday, February 20, 2010





ಪ್ರಜಾವಾಣಿಯ ಮೆಟ್ರೋದಲ್ಲಿ ಪ್ರಕಟವಾಗಿತ್ತು, ದಿನಾಂಕ ನೆನಪಿಲ್ಲ.